s R.S.Venkataraju

Saturday, October 28, 2006

ಇಲ್ಲಿರುವುದು ಸುಮ್ಮನೆ... ಅಲ್ಲಿರುವುದು ನಮ್ಮ ಮನೆ... ಬನ್ನಿ ನಮ್ಮ ಮನೆಗೊಮ್ಮೆ...!!!
ಹೊಸ ಚಿಗುರು ಹಳೆ ಬೇರು
ಕೂಡಿರಲು ಮರ ಸೊಬಗು...
-ಡಿ.ವಿ.ಗುಂಡಪ್ಪ


ಆರ್.ಎಸ್.ವೆಂಕಟರಾಜ್ ಅಂತರಜಾಲ ತಾಣಕ್ಕೆ ಸ್ವಾಗತ.

ನನ್ನ ಅಪರಾಧಗಳು

rsvenkataraju@gmail.com




Fonts problem? Right click the mouse, go to Encoding, select unicode(UTF-8)


ಸುವರ್ಣ ನ್ಯೂಸ್ 24x7 ನೇರಪ್ರಸಾರ











ಬೊಂಬಾಟ್ ಮನರಂಜನೆ:
ಕೆಳಗೆ ಅಂತರಜಾಲದ ಸಖತ್ ಮನರಂಜನೆ ಕೊಂಡಿಗಳ ಸಂಪರ್ಕವಿದೆ.
ತದಯಾಕೆ ಗುರೂ! ಮೌಸನ್ನು ಚಲಿಸಿ, ನಿಮಗಿಷ್ಟವಾದ ಸಂಗೀತಕ್ಕಾಗಿ ಕ್ಲಿಕ್ಕಿಸಿ.
24/7 ಇಂಚರ ರೇಡಿಯೋ
ದಾಸರ ಹಾಡುಗಳು
ಉಧ್ಬವ.ಕಾಂ
ಕನ್ನಡ ಗೀತೆಗಳು(ಆಲ್‌ಇಂಡಿಯಾಸೈಟ್‌.ಕಾಂ)
ಕನ್ನಡ ಆಡಿಯೋ.ಕಾಂ
ಸ್ಮಾಷ್‌ಹಿಟ್ಸ್‌.ಕಾಂ
ಹಮಾರ ಸಿಡಿ.ಕಾಂ
ಭಗವದ್ಗೀತೆ(ಇಂಡಿಯಾ ವಿಲಾಸ್‌.ಕಾಂ)
ವಿಷ್ಣುಸಹಸ್ರನಾಮ(ಇಂಡಿಯಾ ವಿಲಾಸ್‌.ಕಾಂ)
ಕನ್ನಡ ವೀಡಿಯೋ(ಯುಟ್ಯೂಬ್.ಕಾಂ)
ಕನ್ನಡ ವೀಡಿಯೋ
ಕನ್ನಡ ವೀಡಿಯೋ(ಕನ್ನಡ ಮ್ಯೂಸಿಕ್‌ವರ್ಲ್ಡ್.ಕಾಂ)
ವಿಶ್ವ ಕನ್ನಡ.ಕಾಂ
ದಿಶಾಂತ್‌.ಕಾಂ
ಮೈ ದೇಶೀಮ್ಯೂಸಿಕ್.ಕಾಂ
ವಾದ್ಯಸಂಗೀತ(ಇಂಡಿಯಾ ವಿಲಾಸ್‌.ಕಾಂ)
ಇಂಡಿಯಾ ವಿಲಾಸ್‌.ಕಾಂ
ಅಷ್ಟಲಕ್ಷ್ಮಿ ಸ್ತೋತ್ರ(ಇಂಡಿಯಾ ವಿಲಾಸ್‌.ಕಾಂ)
ವೆಂಕಟೇಶ್ವರ ಸುಪ್ರಭಾತ(ಇಂಡಿಯಾ ವಿಲಾಸ್‌.ಕಾಂ)
ಭಕ್ತಿ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ಜಾನಪದ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ರೀಮಿಕ್ಸ್‌ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ಪಾಪ್‌ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ದೇಶಭಕ್ತಿ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ಶಾಸ್ತ್ರೀಯ ಸಂಗೀತ(ಇಂಡಿಯಾ ವಿಲಾಸ್‌.ಕಾಂ)
ಭಾವಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ಚಲನಚಿತ್ರ ಧ್ವನಿವಾಹಿನಿಗಳು(ಇಂಡಿಯಾ ವಿಲಾಸ್‌.ಕಾಂ)
ನಾಟಕಗಳು(ಇಂಡಿಯಾ ವಿಲಾಸ್‌.ಕಾಂ)
ಹರಿಕಥೆಗಳು(ಇಂಡಿಯಾ ವಿಲಾಸ್‌.ಕಾಂ)
ಕನ್ನಡ ಮತ್ತು ವಿಶ್ವ ಚಲನಚಿತ್ರ ರಂಗ
ಕನ್ನಡ ಚಲನ ಚಿತ್ರ ವಿಮರ್ಶೆ
ಸದಭಿರುಚಿಯ ಕನ್ನಡ ಚಲನ ಚಿತ್ರಗಳು
ಸಿನಿಮಾ ಗರಂ ಸುದ್ದಿ
ಡಾ.ರಾಜ್
ಅವರ್‌ ಕರ್ನಾಟಕ.ಕಾಂ ಚಲನ ಚಿತ್ರ
ಕನ್ನಡ ರತ್ನ.ಕಾಂ ಚಲನ ಚಿತ್ರ
ವಿಗ್ಗಿ ಚಲನ ಚಿತ್ರ ಸುದ್ದಿ
ಚಿತ್ರರಂಗ.ಕಾಂ
ಅವರ್‌ ಕರ್ನಾಟಕ ಚಿತ್ರಗೀತೆಗಳು
ಕನ್ನಡ ಲಿರಿಕ್ಸ್‌.ಕಾಂ
ಸಾಹಿತ್ಯ ಪುಟ ಚಿತ್ರಗೀತೆಗಳು
ಕತ್ತಲೆ ಕೋಣಿಯಲ್ಲಿ ಕರಿಬೆಕ್ಕು ಹಿಡಿದವರ ಕತೆ

(ಸಣ್ಣ ಕತೆ)
-ಆರ್.ಎಸ್.ವೆಂಕಟರಾಜ್

The Hell is other people
- Jean Paul Sartre




ಹೀಗೆ:
ಪ್ರತಿ ದಿನ ಬಸ್ಸಿನಲ್ಲಿ ಅಥವಾ ಲೋಕಲ್ ಗಾಡಿಯಲ್ಲಿ ಸಂಚರಿಸುವ ಮುನ್ನ ನೀನು ಕೈಗೆತ್ತಿಕೊಳ್ಳುವ ಪತ್ರಿಕೆಯಲ್ಲಿ ಎಂಥ ಕತೆ ಬಯಸುತ್ತೀ ಎಂದು ನನಗೆ ಚೆನ್ನಾಗಿ ಗೊತ್ತಿದೆ.
ಪ್ರಿಯ ಓದುಗ:
ಆದರೆ ನಾನೀಗ ನಿಸ್ಸಹಾಯಕನಾಗಿದ್ದೇನೆ.ಕರುಣಾಜನಕ ಕತೆಗಳು; ಪ್ರೇಮ ಕತೆಗಳು ನಿನ್ನ ಕಣ್ಣಲ್ಲಿ ಬಿದ್ದು ನೋವಾಗಿ; ನಲಿವಾಗಿಬಿಡುವಂಥ ರಸ ಪ್ರಸಂಗಗಳನ್ನು ಬರೆಯಲು ನಾನು ತಕ್ಕ ವ್ಯಕ್ತಿಯಲ್ಲವೆಂಬುದು ನನಗೀಗಾಗಲೇ ನನ್ನ ವಿಫಲ ಕತೆಗಳಿಂದ ಗೊತ್ತಾಗಿದೆ. ಅಲ್ಲದೆ ನಕ್ಷತ್ರಗಳ ತಹಬಂದಿಯಾದ ಬದುಕಿನ ಕುರಿತು ಬರೆಯಲು ನನಗೆ ಯಾವ ಅಧಿಕಾರ ತಾನೆ ಇದೆ? ಆದರೂ ಕೆಲವೊಮ್ಮೆ ತಾವಂದುಕೊಳ್ಳದ ಅವಘಡಗಳು ನಡೆದು ಬಿಡುತ್ತವೆ.
ಪ್ರವೇಶ:
ಹೀಗಾದದ್ದರಿಂದಲೇ.... ಪರಶಿವನ ಭಕುತನೂ; ನ್ಯಾಯಾನ್ಯಾಯಗಳ ಪರಾಮರ್ಶಿಯೂ...ಸರ್ವಾಂಗ ಸುಂದರನೂ... ಛಪ್ಪನೈವತ್ತಾರು ದೇಶಗಳಲ್ಲಿ ವಿಖ್ಯಾತ ರಸಿಕನೂ ಆಗಿರತಕ್ಕಂಥಾ ಜಸಟೀಸ ಶ್ರೀಮನ್............ರಾಯರ ಕತೆಯೂ...ಆತನ ಕಿವಿಯೂ...ಕಿವಿಯೊಳಗಿನ ಫಳಗುಟ್ಟುವ ವಜ್ರದ ಬೆಂಡೋಲೆಯೂ...ಥರಾವರಿಯಾಗಿ ಬೆಳೆದದ್ದು; ಕತೆಯಾಗಿ ರೂಪಿತಗೊಂಡಿದೆ.
ನಕ್ಷತ್ರಗಳ ಅರಸುವ ಓದುಗರೂ; ಪ್ರೇಮ ಕಾವ್ಯದ ಅಖಂಡತೆಗೆ ಮಾರುಹೋಗುವ ಸುಗುಣವಂತರೂ... ಈ ಕತೆಯನ್ನು ಒಂದು ಪ್ರಸಂಗವಾಗಿಯೂ; ಜಸಟೀಸರ ದೇಹದ ಇಂಚಿಂಚನ್ನು ಸಂಕೇತವಾಗಿಯೂ ಪರಿಗ್ರಹಿಸಿ, ದಯಮಾಡಿ ಕೇಳಿ... ತಮ್ಮ ತಮ್ಮ ಅಭಿಪ್ರಾಯದ ಪ್ರಕಾರ ತಿಳಿದುಕೊಳ್ಳತಕ್ಕದಾಗಿ ; ಮತ್ತೆ ಈ ಕತೆಯಿಂದ ಯಾರಿಗಾದ್ರೂ ಬೇಸರವಾದರೆ... ಬೇಸರಬೇಡವೆಂದು ಸಹೃದಯ ವಾಚಕರಲ್ಲಿ ಈ ಕತೆಗಾರ ಬೇಡಿಕೊಳ್ಳುತ್ತಾನೆ.

ಯಥಾಪ್ರಕಾರವಾಗಿ, ಪರಶಿವನ ಭಕುತನಾದಂಥಹ ಜಸಟೀಸರ ಕತೆಯನ್ನು ಆರಂಭಿಸುವ ಮೊದಲು ಸದ್ಗುರು ವಿನಾಯಕನ ಪ್ರಾರ್ಥನೆಯಾದ--
ಶರಣೆಂಬೆ ಬೆನಕ
ನಿನಗೆ ಶರಣೆಂಬೆ....

ಈ ಥರನಾಗಿ ಪ್ರಾರ್ಥಿಸಿ, ವಿಘ್ನೇಶ್ವರನ ಆಶೀರ್ವಾದ ಪಡೆದು ಕತೆ ಮುಂದುವರೆಸಿ...ಜನ ಸಂತೋಷಕ್ಕೆ ಪಾತ್ರರಾಗಲು ಕಾರಣ ಇದೆ; ಏಕೆಂದರೆ ಅನಾಮಿಕನೂ..ಅರ್ಥಾತ್ ಸರ್ವವ್ಯಾಪಿಯೂ ಆದಂಥಾ...ಆ ಸೂತ್ರಧಾರಿಯ ಪಾತ್ರಧಾರಿಯಾಗಿ ಈ ಪರಸಂಗ ಹೇಳಲು; ಅಪ್ಪಟ ಸಾಕ್ಷಿ ನಾಪಿತ ನರಸಿಂಗ. ನಮ್ಮ ನರಸಿಂಗನಿಗೊಂದು ಕನಸು ಬಿದ್ದಿರಲಾಗಿ....ಆ ಕನಸಿನ ನಂತರವೇ ಪ್ರಸಂಗ ಬೆಳೆದಿದ್ದರಿಂದ ಮತ್ತು ಆ ಕನಸಿನಲ್ಲಿ ಮೂಗಿನ ವೃತ್ತಾಂತ ಕಾಣಿಸಿಕೊಂಡು ಚೌತಿ ಚಂದ್ರಮನ ಗ್ರಹಚಾರವೆಂಬಂತೆ ವಕ್ಕರಿಸಿದ್ದರಿಂದ ...ನಮಗಾರಿಗೂ ಆ ನಾಪಿತನ ಗ್ರಹಚಾರ ಬರದಿರಲೆಂಬ ಸದುದ್ದೇಶದಿಂದ-

ಶರಣೆಂಬೆ ಬೆನಕ
ನಿನಗೆ ಶರಣೆಂಬೆ....
ಶರಣೆಂಬೆ ಬೆನಕ
ನಿನಗೆ ಓ ಪಾರ್ವತೀಸುತನೆ....
ಒಂದು ಪುರಾತನ ದೃಶ್ಯ:
ಶೂರ್ಪನಕಿ ಕಿಟಾರನೆ ಕಿರಿಚಿದ್ದಾಳೆ; ಆಕೆಯ ಕೂಗಿಗೆ ಹಕ್ಕಿ ಪಿಕ್ಕಿಗಳು ಗಡಗಡನೆ ನಡುಗಿ ಪಟಪಟನೆ ರೆಕ್ಕೆ ಬಡಿದರೆ; ಮೋಹಿಸಿ ಲಕ್ಷ್ಮಣನನ್ನು ಪ್ರೇಮಪಾಶದಲ್ಲಿ ಬಂಧಿಸಲು ಬಂದವಳ ಹೃದಯ ಚೂರು ಚೂರಾಗಿ; ಏಕಪತ್ನೀವ್ರತನೂ... ಸುಗುಣವಂಥನೂ; ಪರಾಕ್ರಮಿಯೂ...ಸಹನಶೀಲನೂ; ಮಡಿವಾಳನ ಮಾತಿಗೆ ಕಿವಿಕೊಟ್ಟವನೂ ಆದಂತ ಶ್ರೀಮನ್ ರಾಮನ ಅನುಜನಾದಂತ ಲಕ್ಷ್ಮಣನಿಗೆ ತನ್ನ ಅತ್ತಿಗೆ ಸೀತಾಮಾತೆಯ ಅನುಗ್ರಹದ ಆಗ್ರಹವು ಶೂರ್ಪನಕಿಯ ಪಿರೀತಿಯಿಂದ ಎಚ್ಚರಿಸುವಂತೆ ಮಾಡಿಸಿ-
"ರಾಕ್ಷಸಿ ಶೂರ್ಪನಖಿ ...ನನ್ನ ಬ್ರಹ್ಮಚರ್ಯಕ್ಕೆ ಸವಾಲೆ.." ಇತ್ಯಾದಿ ಮಾತುಗಳನ್ನು ಆಡುತ್ತಾ ಬಾಣದ ತುದಿಯಿಂದ ಶೂರ್ಪನಕಿಯ ಮೂಗನ್ನು ಪರಕ್ಕನೆ ಕೋಳಿ ಕತ್ತಿನಂತೆ ಕತ್ತರಿಸಿದಾಗ; ಮೂಗು ನೆಲಕ್ಕೆ ಬಿದ್ದು ಒದ್ದಾಡಿದೆ. "ಅಣ್ಣಾ ... ರಾವಣ...ದಶಕಂಠಾ..." ಎಂದು ಕೂಗುತ್ತಾ ಆಕೆಯ ಮನವೂ...ತನುವೂ...ಬೆಂಕಿಯಂತೆ ಸುಡುತ್ತಾ ಆಕಾಶದ ಮೈದಾನ ಹೊಕ್ಕಿದೆ. ರಕ್ತ ಬಳಬಳನೆ ಸುರಿದಿದೆ."ಮೂಗಿಲ್ಲದೇ ಹೇಗೆ ಬದುಕಲಿ? ಯಾರನ್ನು ಲಗ್ನವಾಗಲಿ? ಇನ್ನು ತನ್ನ ಆಸೆ ಆಕಾಂಕ್ಷೆಗಳ ಪಾಡೇನು.." ಎನ್ನತ್ತಾ ಶೂರ್ಪನಕಿ ಅತ್ತಿದ್ದಾಳೆ; ಅಳುತ್ತಲೇ ಅಣ್ಣನ ಬಳಿಗೆ ಓಡಿ " ಅಣ್ಣಾ...ಅಣ್ಣಾss.." ಎನ್ನುತ್ತಿದಂತೆ, ಶೂರ್ಪನಕಿಯ ಭಯಂಕರ ಮೊಗ ಕಂಡು ನರಸಿಂಗನೆಂಬೊ ನಾಪಿತನು ನಾನಾ ನಿಮಿತ್ತವಾಗಿ ಗಡಗಡನೆ ನಡುಗಿ ರಾತ್ರಿ ಮಲಗಿದ್ದ ಈಚಲು ಚಾಪೆಯನ್ನು ತೆಳ್ಳಗೆ ಒದ್ದೆ ಮಾಡಿದನು.

ಇಲ್ಲಿಗೆ ಕನಸಿನ ಪ್ರಸಂಗವು ಮುಗಿದು ಆಮೇಲೆ ಏನಾಯಿತೆಂದರೆ-
ಕೈಗೂ ಬಾಯಿಗೂ ಘೋರ ಯುದ್ಧ:
ತಿಳಿಗೆಂಪ ಬಣ್ಣದ ಬೆಳಗಿನ ಸೊಂಪಲ್ಲಿ; ಇಬ್ಬನಿಯ ಕೊರೆತದ ಒಂಚೂರು ತಂಪಲ್ಲಿ; ಗುಡ್ಲ ಒಲೆಯಲ್ಲಿ ಹಸಿ ಪುಳ್ಳೆ ಧಗಧಗನೆ ಉರಿಯದೆ...ಹೊಗೆ ಮೇಲೇರಿ ಕಾವಳದ ಜೊತೆ ತೋಳ್ತೆಕ್ಕೆಯಲ್ಲಿ ಬಂಧಿಯಾಗಿರಲು;ಹೆಣ್ಣೆಂಬ ಹೆಂಗಸದಿಟ್ಟಧೀಮಂತೆಯೂ...ನಮ್ಮ ನರಸಿಂಗನ ಹೆಂಡತಿಯೂ....ಬಿಸ್ತರನ ಹಳ್ಳಿ ಕಾಳಪ್ಪನ ಕಿರಿಮಗಳೂ...ಲಾಗಾಯ್ತಿನಿಂದಲೂ ಗಂಡನಿಗೆ ಗುಲಗಂಜಿ ತೂಕದಷ್ಟೂ ಮರ್ವಾದೆ ಕೊಡದ ಜಾಯಮಾನದವಳೂ ಆದಂಥಾ ಕರಿನಿಂಗವ್ವನೆಂಬುವಳು "ಎದ್ದೇಳು ಮೂದೇವಿ" ಎಂದು ನರಸಿಂಗನ ಮೂತಿಗೆ ತಿವಿದು ವಕ್ರವಕ್ರವಾಗಿ ಮೊಗ ಸಿಂಡರಿಸಿದಾಗ; ಕನಸಿನ ಶೂರ್ಪನಕಿಯೇ ಸಾಕ್ಷಾತ್ ಬಂದಂತಾಗಿ ನರಸಿಂಗನ ಮೈಎಲ್ಲಾ "ಜುಂ" ಎನ್ನಲು; ಹಾಗೆಯೇ ಎದ್ದು ಕೂತಾಗ ಗಮಲು ಗುಡುವ ಕೋಳಿ ಎಸರು ಮೂಗಿಗೆ ಬಡಿದು ಕೊಂಚ ಮೈ ಸಡಲಿಸಿ ಆಕಳಿಸಿದಾಗ; ಮತ್ತೆ ಅವನ ನಿದ್ದೆಗಣ್ಣ ಮುಂದೆ ಮೂಗುಗಳು ಬರತೊಡಗಿದವು. ಶೂರ್ಪನಕಿಯ ಮೊಂಡು ಮೂಗಿನ ಮಗ್ಗುಲಲ್ಲಿ ಹೆಂಡತಿಯ ಬುಗುರಿ ಮೂಗು ಬಂದು ಯಥಾಪ್ರಕಾರವಾಗಿ ಸೊಟ್ಟ ಸೊಟ್ಟದಾಗಿ ನರ್ತಿಸಲು...ಲಕ್ಷ್ಮಣನ ಮೇಲೆ ನರಸಿಂಗನಿಗೆ ಭಾರಿ ಕೋಪ ಬರುತ್ತಿರಲು; ಕರಿನಿಂಗಿ ಮತ್ತೊಮ್ಮೆ ಕೂಗಿದ್ದು ಕೇಳಿಸಲು;ಬೊಕ್ಕಣದಿಂದ ಕೊರೆ ಬೀಡಿ ತೆಗೆದು; ಒಲೆಯ ಉರಿವ ಪುಳ್ಳೆಯಿಂದ ಮುಟ್ಟಿಸಿ ದಂ ಎಳೆದು; ಮಜ್ಜಿಸಲು ಹೊಂಟನು.
ಮೊಗ ತೊಳೆದು ವಲ್ಲಿ ಕೊಡವಿ; ನಿಗಿ ನಿಗಿ ಕೆಂಡದ ಒಲೆಯ ಪಕ್ಕ ಕುಕ್ಕರಗಾಲಲ್ಲಿ ಕೂತ ನರಸಿಂಗನಿಗೆ ರಾತ್ರಿಯ ಕನಸೇ ಮುಂದೆ ಮಗದೊಮ್ಮೆ ನಿಂತಂತಾಗಿ; ಹೆಂಡತಿಯ ಮೊಗವನ್ನೇ ದುರುಗುಟ್ಟಿ ನೋಡಲು, ಅದನ್ನು ಬೇರೆ ರೀತಿ ಅರ್ಥೈಸಿಕೊಡ ಕರಿನಿಂಗಿ ಸಿಲಾವರ ತಟ್ಟೆಯಲ್ಲಿ ಹಬೆ ಏಳುತ್ತಿದ್ದ ರಾಗಿ ಹಸಿಟ್ಟಿನ ಮುದ್ದೆ; ಕೋಳಿ ಎಸರಿನ ಹೋಳುಗಳನ್ನು ಗಂಡನ ಮುಂದೆ ಕುಕ್ಕಲಾಗಿ; ಆತನು ಕೈಗೂ ಬಾಯಿಗೂ ಘೋರ ಯುದ್ಧವನ್ನು ಪ್ರಾರಂಭಿಸದಾಗ; ಏನಾಯ್ತಪ್ಪ ಅಂತಂದರೆ-
ಬಸಕ್ಕನ ಕೋಳಿ:
ಕೆಳಗಿನ ಕೇರಿಯ ಬಸಕ್ಕ ದನಿ ಏರಿಸಿ ರಾಗವಾಗಿ ಅಳುತ್ತಾ " ಅಯ್ಯೋ... ನನ್ನಾಟಗಳ್ಳಾ...ನಿನ್ನ ವಂಶ ನಿರ್ವಂಶ ಆಗಾ... ಬೇಗೂರು ಸಂತ್ಯಾಗ ತಂದ ಬಂಗಾರದಂತಾ ಕೋಳೀನ ಕದ್ರಲ್ಲೋ..." ಎಂದು ಬೈದ ಬೈಗಳನ್ನು ಮತ್ತೆ ಬೈಯದೆ; ತನ್ನ ಬೈಗಳ ನಿಘಂಟನ್ನು ಬಿಚ್ಚುತ್ತಾ; ಲಬ ಲಬಾ ಬಾಯಿ ಬಡಿದುಕೊಳ್ಳುತ್ತಾ; ಕೂಡು ರಸ್ತೆಯಲ್ಲಿ ಮೂರು ಹಿಡಿ ಮಣ್ಣನ್ನು ತಲೆ ಮೇಲಿಂದಾ ಬೆನ್ನ ಹಿಂದೆ ಎರಚಿ" ನಿನ್ನ ವಂಶ ನಿರ್ವಂಶ ಆಗಾ... ನನ್ನ ಕೋಳೀನ ಬೇಯ್ಸಿತಿಂದೋರ ಬಾಯಿಗೆ ನನ್ನ ಮಿಂಡನ ಹೇಲ್ಹಾಕಾ..." ಎಂದು ಲಟಲಟನೆ ಲಟಿಗೆ ಮುರಿದು; ತನ್ನ ಗುಡ್ಲಿಗೆ ಹೊರಟಿರಲಾಗಿ; ಕೋಳಿ ಬಾಡನ್ನು ಬಾಯಲ್ಲಿ ಇಟ್ಟ ನರಸಿಂಗನು "ಹೊಯಿಕ್... ಹೊಯಿಕ್" ಎಂದು ತುಂಡನ್ನು ಹೊರಗೆ ಉಗಿಳಿದನು.
'ಬಸಕ್ಕನ ಕೋಳಿ ಎಂದಿದ್ದರೆ ದೇವ್ರಾಣಿಗೂ ಕದೀತಿರಲಿಲ್ಲ. ಬಸಕ್ಕನ ಬಾಯಲ್ಲಿ ಬೀಳೋದೂ ಒಂದೇ; ಹಾಳು ಭಾವೀಲಿ ಬೀಳೋದೂ ಒಂದೇ.ಜಲ್ಮ ಜಾಲಾಡಿಸಿ ಏಳು ತಲೆಮಾರಿನವರನ್ನೂ ಎಳೆದು; ಮಾನ ಮರ್ವಾದೆ ಮೂರು ಕಾಸಿಗೆ ಹರಾಜಾಕಿ; ಎಕ್ಕಡದಲ್ಲಿ ಬಾಚಿ, ಚಕ್ಕಡೀಲಿ ಹಾಕ್ತಾಳೆ ಭೋಸುಡಿ ಇವಳ ಗುಡಾಣ ಮೊಲೆಯ ಆಸೆಗೆ; ಪೇಟೆಯ ಗಂಡು ಅನ್ನಿಸಿಕೊಂಡ ಇಸಮುಗಳೆಲ್ಲಾ ಒಂದಲ್ಲಾ ಒಂದು ಇರುಳು; ಅವಳ ಗುಡ್ಲಿಗೆ ನುಗ್ಗಿದವರೇ...' ಎಂದೆಲ್ಲಾ ಯೋಚನೆಗೈಯುತ್ತಿದ್ದ ನರಸಿಂಗನಿಗೆ ಶೂರ್ಪನಕಿಯ ಮೊಂಡು ಮೂಗು; ಕರಿನಿಂಗಿಯ ಬುಗರಿ ಮೂಗಿನ ಜೊತೆ ಬಸಕ್ಕನ ಕೋಳೀ ಮೂಗೂ ಸೇರಿ ವಿಚಿತ್ರವಾಗಿ ತಾಂಡವ ನೃತ್ಯವಾಡುತ್ತಿರಲು; ಕೊನೆಗೆಲ್ಲಾ ಮಂಕಾಗಲಾಗಿ...... ಸಂಜೆ ಕತ್ತಲಲ್ಲಿ; ಬೇಲಿ ಸಂದೀಲಿ ಕೋಳಿ ಕೊಕ್...ಕೊಕ್...ಕ್ಕೊ.. ಅಂಬಲಾಗಿ; ನರಸಿಂಗನ ಬಾಯಲ್ಲಿ ನೀರೂರಲಾಗಿ; ಬಟ್ಟೆ ಪಿನ್ನನ್ನು ದಾರಕ್ಕೆ ಕಟ್ಟಿ ಗಾಳದ ಕೊಕ್ಕೆಯಂತೆ ಮಾಡಿ; ಈರುಳ್ಳಿ ಸಿಗಿಸಿ ಕೋಳಿ ಹತ್ತಿರ ಎಸೆಯಲಾಗಿ; ಕೋಳಿ ಈರುಳ್ಳಿ ನುಂಗಲಾಗಿ; ಬಟ್ಟೆ ಪಿನ್ನು ಕೋಳಿ ಹೊಟ್ಟೆಯಲ್ಲಿ ಗಾಳದಂತೆ ಸಿಕ್ಕಿ ಹಾಕಿಕೊಳ್ಳಲಾಗಿ; ಕೋಳಿ ಕೊಕ್ ಎನ್ನಲೂ ಆಗದೇ ಇರಲಾಗಿ; ನರಸಿಂಗನೆಂಬೋ ನಾಪಿತನು ಗೋಣೀ ಚೀಲದಲ್ಲಿ ಕೋಳಿ ಹಿಡಿದು; ಪುಕ್ಕ ತರೆದನು.ಇಲ್ಲಿಗೆ ಬಸಕ್ಕನ ಕೋಳಿ ಪ್ರಸ್ತಾಪವು ಸಮಾಪ್ತಿಯಾಯಿತು.
ಕರಿನಿಂಗಿ ಬಸರಿ:
ಇತ್ತ ಕಡೆ ನರಸಿಂಗ ತನ್ನದೇ ಆದಂತಹ ಅನುಭವವನ್ನು ಮರುಕಳಿಸಿಕೊಳ್ಳುತ್ತಿದ್ದಾಗ; ಅತ್ತ ಕಡೆ ದಿಟ್ಟಧೀಮಂತೆ ಬಿಸ್ತರನಹಳ್ಳಿ ಕಾಳಪ್ಪನ ಕಿರಿಮಗಳಾದಂತಹ ಕರಿನಿಂಗವ್ವ ಸೌಟಿನ ಮೇಲೆ ಸೌಟು ಕೋಳೀ ಬಾಡನ್ನು ಧ್ವಂಸ ಮಾಡುತ್ತಿರಲು; ಕಿಟಾರನೆ ಕಿರುಚಿ "ಅಯ್ಯೋ ಬೇವರ್ಶಿ... ಮೂದೇವಿ ನಿಂಗೇನು ಓಗೋ ಕಾಲ ಬಂತೋ..." ಇನ್ನೂ ಮುಂತಾಗಿ ಬೈಯಲು ಬಾಯಿ ತೆರೆದಾಗ... ಬಾಯಿಂದಾ ಬೈಗಳು ಬರದೇ ಕುಡಿದ ಹುಳಿ ಹೆಂಡ; ನುಜ್ಜು ಗೊಜ್ಜಾದ ಕೋಳೀ ಬಾಡು ವಾಂತಿಯಾಗಿ 'ಹೊಯಿಕ್...ಹೋ..ಇಕ್' ಹೊರಬಂದು ಸಗಣಿ ಸಾರಿಸದ ನೆಲದ ಮೇಲೆ ಸಿಂಪಡಿಸಿದಾಗ; ಗುಡ್ಲ ತುಂಬೆಲ್ಲಾ ಗಬ್ಬು ವಾಸನೆ ತುಂಬಿತು.
ಮೊದಲೇ ಬಸಕ್ಕನ ಬೈಗಳಿಂದ ಚೇತರಿಸಿಕೊಳ್ಳುತ್ತಿದ್ದ ನರಸಿಂಗ; ಕರಿನಿಂಗಿಯ ಬೈಗಳಿಂದ ತತ್ತರಿಸಿದನು. ಜಿಡ್ಡುಗಟ್ಟಿದ ಅವನ ಮೊಗದಲ್ಲಿ ಕಿರುನಗೆಯೊಂದು ಒಂದು ಚಣ ಲಾಸ್ಯವಾಗಿ ಮಾಯವಾಯಿತು. " ಕರಿನಿಂಗಿ ಬಸರಿ; ಇಲ್ದಿದ್ರೆ ವಾಂತಿಯಾಕೆ ಮಾಡ್ತಿದ್ಲು! ಸರಿ ವಾಂತಿ ಮಾಡಿದಳು, ಆದ್ರೆ ತನ್ನನ್ಯಾಕೆ ಬೈಯಬೇಕು? ಭೋಸುಡಿ. ಸರಿ ಬೈದಳು! ವಾಂತಿಯಾಕೆ ಮಾಡಬೇಕು ? ಭೋಸುಡಿ....." ಎಂಬ ತರ್ಕ ವಿತರ್ಕವಾದದಲ್ಲಿ ತೊಡಗಿ ಬಾಯಿತೆರೆದು ಗೊಂದಲದಲ್ಲಿ ಬಿದ್ದಾಗ; ಏನಾಯ್ತಪ್ಪ ಅಂತಂದರೆ-
ಲಕ್ಷ್ಮಣ ಸ್ವಾಮಿಯ ಆದರ್ಶ:
ನರಸಿಂಗನ ಮೊಗದ ಮುಂದೆ ಮನುಷ್ಯರ ಬೆಂದ ಕಿವಿಯೊಂದನ್ನು ಹಿಡಿದ ಕರಿನಿಂಗಿ ಉಗ್ರವಾಗಿದ್ದಳು.
ಕೋಳಿ ಗುಂಡಿಗೆಯೆಂದು ಕರಿನಿಂಗವ್ವ ಜಗಿದಿದ್ದು; ಕೋಳಿ ಗುಂಡಿಗೆಯಾಗಿರದೇ; ಮನುಷ್ಯನ ಕಿವಿಯಾಗಿದ್ದು...! ಯಮಕೆ ಎಂದು ಕಡಿದದ್ದು ಯಮಕೆಯಾಗಿರದೇ; ಆ ಕಿವಿಯಲ್ಲಿದ್ದ ವಜ್ರದ ಬೆಂಡೋಲೆ ಆಗಿದದ್ದೇ...! ಈ ಎಲ್ಲಾ ರಾದ್ದಾಂತಕ್ಕೆ ಕಾರಣವಾಯಿತೆಂದು ಬೆಸಗೊಂಡವರು ಆಲಿಸಬೇಕೆಂದು ಪ್ರಾರ್ಥನೆ.
"ಅಯ್ಯೋ... ನಿನ್ನ ಮನೆ ಹಾಳಾಗಿ ಹಾಳವಾಣ ಬಿತ್ತಾ... ನಿಂಗೇನು ಓಗೋ ಕಾಲ ಬಂತೋ ಮುಕ್ಕಾ... ನಿಂಗಷ್ಟು ದೇಸ ಇದ್ರೆ... ನನ್ನೇ ಕೊಂದಾಕ ಬೇಕಿತ್ತು. ಬಂಗಾರದಂತಾ ಜಸಟೀಸ ಸೋಮಿಗಳ ಕಿವಿ ತರಕೊಂಡು ಬಂದು ಬಾಡ್ನಾಗಾಕಿ ನಂಗೇ ತಿನ್ನಿಸ್ತೀಯಾ... ಭಾಡಿಯಾ...ನೆನ್ನೆ ಸಂಜಿನಾಗೆ ಅವರ ಮನೆ ಕೆಲಸಕ್ಕೆ ಹೋದಾಗ; ಮಾರಾಜರಂಗೆ ಕುದುರೆ ಸಾರೋಟು ಇಳಿದು ಬಂದವರೇ; ಕಾಲೊತ್ತುಬಾರೇ ನಿಂಗೀ...” ಅಂದಿದ್ದರಲ್ಲಾ ಸೋಮಿಗಳು; " ಏಸು ಚಂದಾ ಅದೀಯಲ್ಲೇ ನಿಂಗೀ....ಅಂತಿದ್ದರಲ್ಲಾ ಸೋಮಿಗಳು....."ಎಂದು ರಾಗವಾಗಿ ಅಳುತ್ತಾ ಕರಿನಿಂಗವ್ವ ನರಸಿಂಗನ ಮೋರೆಗೆ ತಿವಿಯಲು, ಜಂಘಾಬಲ ಉಡುಗಿ; ಈ ಪರಪಂಚದೊಳಗೆ ಬಂದ ನರಸಿಂಗ; ಕಿವಿಯನ್ನೋಮ್ಮೆ ಕೈಯಲ್ಲಿ ಹಿಡಿದು ಸೂಕ್ಷ್ಮವಾಗಿ ಪರೀಕ್ಷಿಸಿದ. ಕಿವಿ ಬೆಂದಿದ್ದರಿಂದ ಕೊಂಚ ಊದಿಕೊಂಡಿತ್ತು. ಕೆಳಗಿವಿಯ ಹತ್ತಿರ ಕರಿನಿಂಗಿಯ ಎಮ್ಮೆಯಂತಹ ಹಲ್ಲುಗಳ ಗುರುತು ಕಾಣಿಸುತ್ತಿತ್ತು. ಕಿವಿಯ ಮೇಲು ಭಾಗದಲ್ಲಿ ಯಾರದೋ ಹಲ್ಲುಗಳ ಗುರುತು ಆಳವಾಗಿ ಇಳಿದಿದ್ದವು. ಇಷ್ಟಾದರೂ ಬೆಂಡೋಲೆಯ ವಜ್ರವಂತೂ ಪಳ ಪಳನೆ ಪಳಗುಟ್ಟುತ್ತಾ ಕಿವಿಯ ನಿಗೂಢತೆಯನ್ನು ಕಾಪಾಡುತ್ತಿತ್ತು.
ಬೆಳಗಿನ ಸೂರ್ಯ ಪರಪಂಚದ ಕಾವುಗಳಿಗೆ ಕಾದು ಕಾವಲಿಯಂತೆ ಕೆಂಪಾಗಿ, ಕಾವಳದ ಮುಸಕನ್ನು ಮರೆಯಾಗಿಸಿ ದೊಡ್ಡಿಯಲ್ಲಿದ್ದ ಕೆಂಪುದಾಸವಾಳದ ದಳಗಳನ್ನು ಮತ್ತಷ್ಟು ಕೆಂಪಾಗಿಸಿದ್ದ. ಬೇಲಿಯಲ್ಲಿ ಮರೆಯಾಗುತ್ತಿದ್ದ ಕರಿನಾಗರನ ಮೇಲೆ ಸೂರ್ಯಕಿರಣ ಬಿದ್ದು ಮಿರಿಮಿರಿ ಮಿಂಚುತ್ತಿತ್ತು. ಗಾಳಿ ಬೀಸಿದ ಕಡೆ ಕರನಿಂಗಿಯ ರಾಗದ ಅಳುವಿನ ದನಿ ಅಲೆ ಅಲೆಯಾಗಿ ಪಸರಿಸಿ ಅಕ್ಕಪಕ್ಕದ ಗುಡ್ಲ ಜನರ ಪ್ರಜ್ಞಾವಲಯದ ನೇಮಿಯಲ್ಲಿ ಸುಳಿದಿಣಿಕಿ ಮಾಯವಾಗುತ್ತಿತ್ತು.
ನರಸಿಂಗನಿಗಂತೂ ತಲೆಬುಡ ಒಂದೂ ಗೊತ್ತಾಗದೆ ವಿಲಿ ವಿಲಿ ಒದ್ದಾಡಿದ. ಮುಂಬರುವ ಅನಾಹುತಗಳು ದುತ್ ಎಂದು ಎದ್ದು ನಿಂತಿದ್ದರಿಂದ ಹೆದರಿ ಅವನು; ಲಕ್ಷ್ಮಣ ಸ್ವಾಮಿಯನ್ನು ಆದರ್ಶ ಪುರಷನಾಗಿ ಕಂಡು ಕಸುಬಿನ ಡಬ್ಬಿಯಿಂದ ಮೊಗ ಚೌರದ ಕತ್ತಿ ತೆಗೆದು "ಭೋಸುಡಿ...ಅತ್ತು ಕರೆದು ರಂಪ ಮಾಡಿ ನಾಕು ಜನರಿಗೆ ಗೊತ್ತಾದರೆ ನಿನ್ನ ಬುಗುರಿ ಮೂಗು ತರೆದು ಬಿಡುತ್ತೇನೆ" ಎಂದಾಗ. ಜೀವಮಾನದಲ್ಲಿ ಪ್ರಥಮ ಬಾರಿಗೆ ಗಂಡನಲ್ಲಿ ಗಂಡಸುತನ ಕಂಡ ಕರಿನಿಂಗಿಯು ಜಸಟೀಸ ಸೋಮಿಗಳ ಬೆಂದ ಕಿವಿಯನ್ನು ಅದರಲ್ಲಿ ಫಳಗುಡುವ ವಜ್ರದ ಬೆಂಡೋಲೆಯನೊಮ್ಮೆ ನೋಡಿ ಏನು ತಿಳಿದಳೋ ತೆಪ್ಪಗಾದಳು.
ತೊರೆ ಚರಂಡಿಯಾದ ಪರಿಯು:
ಕಾರ್ಯೋನ್ಮುಖನಾದ ನರಸಿಂಗನು ಕಸುಬಿನ ಡಬ್ಬಿಯಲ್ಲಿದ್ದ ಮೊಗ ಚೌರ ಮಾಡಿ ಸೀಟಲು ಇಟ್ಟಿದ್ದ ಕಾಜಗದಲ್ಲಿ ಕಿವಿಯನ್ನು ಸುತ್ತಿ ;ದೊಡ್ಡ ಚರಂಡಿಯ ಕಡೆ ಬಿಜಂಗೈಸಿದನು.
ಹಿಂದೆ... ಬಹು ಹಿಂದೆ; ಈ ದೊಡ್ಡ ಚರಂಡಿಯು ತೊರೆಯಾಗಿ ತಿಳಿ ನೀರೇ ಹರಿಯುತ್ತಿತ್ತು. ಅಷ್ಟೇಕೆ ಮಾರಮ್ಮನ ಜಾತ್ರೆಯಲ್ಲಿ ಗಂಗೆಪೂಜೆಗೆ ಇಲ್ಲಗೇ ಬರುತ್ತಿದ್ದೆವೆಂದು ಹಟ್ಟಿಯ ಅಜ್ಜಿಗಳು ಇಂದಿಗೂ ಹೇಳುತ್ತಾರೆ. ಆದರೆ ಪೇಟೆಯ ಕೊಳಚೆ ನೀರೆಲ್ಲಾ ಈ ತೊರೆಗೆ ಬಂದು ಸೇರಿದ್ದರಿಂದ ಚರಂಡಿಯಾಯಿತು. ಇಷ್ಷು ಸಾಲದೆಂಬಂತೆ ಹುಚ್ಚು ಕುದುರೆ ಏರಿ ಪೇಟೆ ನಗರವಾಗುವ ಭರಾಟೆಯಲ್ಲಿ ಕಾರ್ಖಾನೆಗಳು ಹಟ್ಟಿಯನ್ನು ಒತ್ತಿಕೊಂಡು ಬೆಳೆದಿದ್ದವು. ಅವುಗಳ ಹೊಗೆ ಹಟ್ಟಿಯ ಹಸುಕಂದಗಳ ಉಸಿರೆಂಬೋ ನಾಳಿನ ಕನಸುಗಳನ್ನೂ ಕದಡಿದ್ದರೆ....ಕಾರ್ಖಾನೆಗಳ ಧಾರಾಳ ಕೊಳಚೆ ನೀರು ಈ ಚರಂಡಿಗೆ ಕಾಣ್ಕೆಯಾಗಿತ್ತು; ದೊಡ್ಡ ಚರಂಡಿಯಾಗಿ ನಾಮಕರಣಕ್ಕೆ ನಾಂದಿಯಾಯಿತು.
ಹಟ್ಟಿಯ ಜನಕ್ಕೆ ಬೆಳಿಗ್ಗೆ ಬರ್ಹಿದೆಸೆಯಿಂದ ಹಿಡಿದು ರಾತ್ರಿ ಪಡ್ಡೆ ಹುಡುಗರ ದೈಹಿಕ ಸಂಬಂಧಗಳಿಗೂ....ಈ ದೊಡ್ಡ ಚರಂಡಿಯ ಲಂಟಾಣ ಪೊದೆಗಳೇ ಗತಿ. ಅದಕ್ಕೆ ಸಾಕ್ಷಿ ಈ ದೊಡ್ಡ ಚರಂಡಿಯೇ.....ಕೆಲವೊಮ್ಮೆ ಬಟ್ಟಿ ಸಾರಾಯಿಯ ಸೀಸೆಗಳೂ ಈ ಚರಂಡಿಯಲ್ಲಿ ಬಚ್ಚಿಟ್ಟುಕೊಳ್ಳವುದೂ ಇದೆ.
ರಾತ್ರಿ ಬಿದ್ದ ಕನಸಿನ ಗ್ರಾಚಾರವೇ ಈ ರೀತಿ ಕಾಡುತ್ತಿದೆ;ಈ ಸುದ್ದಿ ಪೊಲೀಸ್ನೋರಿಗೆ ತಿಳಿದರೆ ತನ್ನನ್ನು ಗಲ್ಲಿಗೇರಿಸುವುದುಗ್ಯಾರಂಟಿ ಎಂದು ಬಗೆದ ನರಸಿಂಗ, ಮೊಗದಲ್ಲಿ ಹುಚ್ಚು ಧೈರ್ಯದ ಕಳೆ ತುಂಬಿಕೊಂಡು; ಯಾರಾದರೂ ನೋಡಿದರೆ ಕಷ್ಟ ಎಂದು ತಲೆ ಮೇಲೆ ವಲ್ಲಿ ಮುಸುಕು ಹಾಕಿಕೊಂಡು ದೊಡ್ಡ ಚರಂಡಿ ಇಳಿಯತೊಡಗಿದಾಗ-
ದಫೇದಾರ ಪೀರಸಾಬ:
ದೊಡ್ಡ ಚರಂಡಿಯ ಆಚೆಕಡೆ ಕೆಸರಿನಲ್ಲಿ ಏನೋ ಹುಡುಕುತ್ತಿದ್ದ ವ್ಯಕ್ತಿ "ಯಾರದು?" ಎಂದು ಪ್ರಶ್ನಿಸಿತು. ತಲೆ ಎತ್ತಿ ನೋಡಿದ ನರಸಿಂಗನ ಗುಂಡಿಗೆ "ಜಲ್‌" ಎಂದಿತು. ದಪೇದಾರ ಪೀರಸಾಬ...! ಅದೂ ದಿರಿಸಿನಲ್ಲಿದ್ದಾನೆ. ನರಸಿಂಗನಿಗೆ ಒಂದು... ಎಲ್ಡೂ...ಬರೊಂಗೆ ಆಯಿತು. ಕಣ್ಣಿಗೆ ಕತ್ತಲು ಕವಿಯಿತು.ಕೈಗೆ ಕೋಳ ಹಾಕಿ ಕತ್ತೆ ಮೇಲೆ ಕೂರಿಸಿ; ಕೊರಳಲ್ಲಿ ಈರುಳ್ಳಿ ಸರ ಆಕಿ... ಹಟ್ಟೀ ತುಂಬಾ ಸುತ್ತಾಡಿಸಿ... ಕೋಲ್ಟಿನಿಂದಾ ಸೀದಾ ಜೈಲಿಗೆ ಹಾಕಿದ ದಫೇದಾರ ಪೀರಸಾಬ; ನರಸಿಂಗ ಬೊಂಬ್ಡಾ ಹೊಡೆಯುತ್ತಿದ್ದರೂ ಕೇಳದೆ ನೇಣೆತ್ತಿದ.
"ಯಾರದು?" ಎಂದು ದಫೇದಾರ ಮತ್ತೆ ಕೇಳಿದಾಗ , ಎಚ್ಚೆತ್ತ ನರಸಿಂಗ " ನಾ...ನಾ...ನು..ನರಸಿಂಗ.. ಹಜಾಮ ನರಸಿಂಗ ಎಲ್ಡಕ್ಕೆ ಓಗೋಕೆ ಬಂದೇ" ಎಂದು ತೊದಲುತ್ತಾ ಚಲ್ಲಣದ ಲಾಡಿಗೆ ಕೈಹಾಕಿದ.
ದಫೇದಾರ ಪೀರಸಾಬನೂ ಕಿತ್ತೋದೋನೆ; ಬೆಳಿಗ್ಗೆನೇ ಸಾರಾಯಿ ಕುಡಿಯೋಕೆ ಬಂದು ಬಟ್ಟಿ ಸಾರಾಯಿ ಸೀಸೆ ಬಚ್ಚಿಟ್ಟ ಜಾಗ ಮರೆತು; ಕೆಸರಲ್ಲಿ ಗಬರ್ಲಾಡ್ತಾ ಇದಾನೆ. ನರಸಿಂಗನಿಗೆ ಅಷ್ಟು ಸಮಯ ಸಾಕಾಗಿತ್ತು. ಚಲ್ಲಣ ಬಿಚ್ಚಿ ಲಂಚಾಣದ ಪೊದೆ ಮರೆಯಾಗಿ; ಕಿವಿಯೆಂಬ ಶನಿಯನ್ನು ದೊಡ್ಡ ಚರಂಡಿಗೆ ಎಸೆದ. ಬಸಿರಿ ಹೆಂಗಸಿನಂತೆ ಕಾಜಗದಲ್ಲಿನ ಕಿವಿ ಚರಂಡಿ ಕೊಚ್ಚೆ ಜತೆ ತೇಲುತ್ತಾ ಹೊದ್ದ ಕಂಡು; ಕೆಮ್ಮಿ ಕ್ಯಾಕರಿಸಿ ಉಗಿಳಿದಾಗ ಅವನಿಗೆ ನಿರುಮ್ಮಳವಾಯಿತು.
ಫಿರ್ಯಾದು ಹೋಯಿತು:
ಗುಡ್ಲೆಂಬೋ ..... ಗುಡ್ಲಲ್ಲಿ ಕರಿನಿಂಗಿ ಮೂಲೆಯಲ್ಲಿ ಬಿಮ್ಮಗೆ ಕೂತು ಗುಡ್ಲಸೂರನ್ನೇ ನೋಡುತ್ತಿದ್ದಳು. ನರಸಿಂಗ ಏನೇ ಕೇಳಿದರೂ ಬರೀ ಕೈಸನ್ನೇ.... ಬಾಯಿಸನ್ನೆ ಅಷ್ಟೇ ಮಾಡುತ್ತಿದ್ದ ಕಂಡು " ಥೂ...ಇವಳವ್ವನ..." ಎಂದು ಹೆಗಲ ಮೇಲಿನ ವಲ್ಲಿ ಕೊಡವಿ ಕಸುಬಿನ ಡಬ್ಬಿಯನ್ನು ಕಂಕುಳಲ್ಲಿ ಸಿಗಿಸಿ ಪೇಟೆ ಕಡೆ ಹೊಂಟ.
ಸಂಜೀನಾಗ ಪೇಟೆಯಿಂದ ಬಂದ ನರಸಿಂಗ; ನರಸಿಂಗನಾಗಿರಲಿಲ್ಲ. ಪೇಟೆಯಲ್ಲಿ ಕೇಳಿದ ಸುದ್ದಿ ಅವನಿಗೆ ದೆವ್ವ ಬಡಿಸಿತ್ತು. ಜಸಟೀಸ ಸ್ವಾಮಿಗಳು ತಮ್ಮ ಬಲ ಕಿವಿಯ ಕಳುವಿನ ಬಗ್ಗೆ ಪೊಲೀಸರಿಗೆ ಕಂಪ್ಲೆಂಟು ಕೊಟ್ಟಿದ್ದು..."ನಿಮ್ಮದು ಹಿತ್ತಾಳೆ ಕಿವಿ ಹೇಗೆ ಕಳೆಯುತ್ತೆ" ಎಂದು ಪೊಲೀಸರು ಹೇಳಿದ್ದು... ಸರ್ಕಾರದ ಪರ ಪತ್ರಿಕೆಗಳು ಅದನ್ನೆ ಸುದ್ದಿ ಮಾಡಿ ಕೆತ್ತಿದ್ದು; ಕಲ್ಲಿನ ಕಟ್ಟಡದಲ್ಲಿ ಗದ್ದಲವಾಗಿ, ವಿರೋಧ ಪಕ್ಷಗಳ ಕಣ್ಣೊರಿಸಲು ಕಿವಿಯ ಆಯೋಗ ನೇಮಿಸಿದ್ದು.ಕೊನೆಗೆ ತಲೆಮರೆಸಿಕೊಂಡು ಗೃಹಮಂತ್ರಿಗಳ ಮನೆಯಲ್ಲಿ ಅವಿತಿದ್ದ ಕಿವಿಯನ್ನು ಅರೆಷ್ಟು ಮಾಡಿದ ಪೊಲೀಸರ ಎಫ್.ಐ.ಆರ್.ನಲ್ಲಿ ಕಿವಿಯ ಬೆಂಡೋಲೆಯ ಫಳಗುಟ್ಟುವ ವಜ್ರ ನಾಪತ್ತೆಯಾಗಿರುವ ಸುದ್ದಿ ಕುದುರೆ ಏರಿ ಊರೂರು ಅಲೆಯುವ ನಾಡಾಡಿಯಾಗಿತ್ತು
ಕರಿನಿಂಗಿ ಖಲಾಸ್:
ತಲೆತುಂಬಾ ಯೋಚನೆ; ಮೈತುಂಬಾ ಜ್ವರ ಹೊತ್ತು ಬಂದ ನರಸಿಂಗನಿಗೆ ಯಾಕೋ ಹಟ್ಟಿಯ ಬುಡ್ಡಿ ದೀಪಗಳು ಸಾವನ್ನು ನೆಪ್ಪಿಗೆ ತಂದವು.
ಗುಡ್ಲಲ್ಲಿ "ಗೌ" ಎನ್ನುತ್ತಿದ್ದ ಕತ್ತಲು ನೋಡಿ "ನಿಂಗೀ....ನಿಂಗೀ..." ಎಂದರೂ ಉತ್ತರವಿಲ್ಲ. ನರಸಿಂಗನಿಗೆ ಉರಿದೋಯ್ತು. "ಥೂ...ಬಿಸ್ತರನ ಹಳ್ಳಿ ಜ್ಯಾತೀನಾ ಕ್ಯಾ..." ಎಂದು ಕಡ್ಡಿ ಕೊರೆದು ಮೋಟು ಬೀಡಿ ಹೊತ್ತಿಸಿ... ಅದೇ ಕಡ್ಡೀಲಿ ಬುಡ್ಡಿ ಮುಟ್ಟಿಸಿದ. ಕರನಿಂಗವ್ವ ಬೆಳಗಿನ ಭಂಗಿಯಲ್ಲೇ ಮೂಲೆಯಲ್ಲಿ ಬಿಮ್ಮಗೆ ಕೂತು; ಬಿಟ್ಟಗಣ್ಣು ನೆಟ್ಟಗೆ ಬಿಟ್ಟು ಗುಡ್ಲಸೂರನ್ನೇ ನೋಡುತ್ತಿದ್ದಳು.... ಅವಳ ಹೊಟ್ಟೆ ಗಬ್ಬದ ಎಮ್ಮೆಯಂತೆ ಊದಿಕೊಂಡಿತ್ತು..! ಅಲ್ಲಾಡಿಸಿದಾಗ ಸೂರಿನ ಮೇಲಿದ್ದ ನೋಟ ನರಸಿಂಗನ ಮೇಲೆ ಬೀರಿದಳು.
ಇವಳ ಬುದ್ದಿ ಗೊತ್ತಿದ್ದ ನರಸಿಂಗ ಮೂಲೆಯಲ್ಲಿದ್ದ ಹಾರೆ ಸಲಿಕೆ ಹಿಡಿದು ಗುಡ್ಲ ಹಿಂಭಾಗದ ದೊಡ್ಡಿಯಲ್ಲಿದ್ದ ಹುಣಸೇ ಮರದ ಬೊಡ್ಡೆಯ ಕೆಳಗೆ ಗುಂಡಿಯನ್ನು ಅಗೆಯತೊಡಗಿದ. ಭಯ..ಆತಂಕ..ವಿಚಿತ್ರ ವೇದನೆಗಳಿಗೆ ಅವನ ಮನಸ್ಸು ಹುಳಿಯಾಗಿತ್ತು. ಗುಡ್ಲಲ್ಲಿ ಬಿಮ್ಮಗೆ ಕೂತ ಕರಿನಿಂಗಿಯ ಜುಟ್ಟನ್ನು ಹಿಡಿದು ದರ ದರ ಎಳೆದು ತಂದು ....................... ಗುಂಡಿಯನ್ನು ಜಾಗ್ರತೆಯಿಂದ ಮುಚ್ಚಿದ ನರಸಿಂಗ, ಯಾರೂ ನೋಡಿಲ್ಲವೆಂದು ಖಾತ್ರಿ ಮಾಡಿಕೊಂಡು; ಗುಡ್ಲು ಸೇರಿ ಈಚಲು ಚಾಪೆ ಎಳೆದು; ಹರಕು ಕಂಬಳಿಯನ್ನು ಗುಬರಲ ಹಾಕಿಕೊಂಡನು.
ಕೊನೆಯ ಅಂಕ ಅರ್ಥಾತ್ ಭರತ ವಾಕ್ಯ:
ಎಂದಿನಂತೆ ಅಂದೂ ಸೂರ್ಯದೇವನು ಏಳು ಕುದುರೆ ರಥ ಏರಿ ಬಸಕ್ಕನ ಗುಡ್ಲ ಹಿಂಭಾಗದಿಂದ ಮೇಲೆ ಬಂದ. ಹಟ್ಟೀಲಿ ವಿಚಿತ್ರ ಪರಿಸರ ತುಂಬಿತ್ತು. ತಂಪು ಪರಿಸರದ ಆಹ್ಲಾದತೆಯೇ ಆಗಲಿ, ಪಚ್ಚೆ ಹಸಿರ ಸೊಬಗ ಚೇತೋಹಾರಿತನಗಳೇ ಆಗಲಿ...ಯಾವುದೂ ಜೀವನಕ್ಕೆ ರೋಮಾಂಚನ ತರುವ ಸಾಧ್ಯತೆಗಳು ಅಲ್ಲಿರಲಿಲ್ಲ. ಮುಂಜಾನೆಯ ಇಬ್ಬನಿಯ ಕೊರೆತ ನಿಜಕ್ಕೂ ಆ ಪರಿಯ ಬದುಕಲ್ಲಿ ಇಬ್ಬಂದಿತನಗಳಲ್ಲದೇ ಮತ್ತಿನ್ನೇನೂ ಸೃಷ್ಟಿಸಿರಲಿಲ್ಲ. ಸೋನೆ ಮಳೆಯು ಮುಂಜಾನೆ ಕೆಂಬಿಸಿಲನ್ನು ಸವಕಲು ಸವಕಲಾಗಿ ಕಾಡುತ್ತಿತ್ತೇ ಹೊರತು; ಹೊಸತಾದ ಉಸಿರನ್ನಂತೂ ತರುತ್ತಲೇ ಇರಲಿಲ್ಲ. ಹಸಿರು... ಮರಗಿಡ.... ಹಕ್ಕಿ... ಆಕಾಶ...ಸೂರ್ಯ...ಚುಕ್ಕಿ....ಚಂದ್ರಮರು ಜಡ್ಡುಗಟ್ಟುತ್ತಿದ ಜೀವನಕ್ಕೆ ಒಂಚೂರೂ ಆಸೆಯ ಹೊಂಗಿರಣಗಳು ಬೀರಿರಲಿಲ್ಲ.
ಸೋನೆ ಮಳೆಯು ಮುಂಜಾನೆಯ ಕಾವಳದ ಜತೆ ಸೇರಿ; ಹಟ್ಟಿಯ ಜನ ನಡುಗುತ್ತಿದ್ದರೋ.. ಅಥವಾ ಆ ಬರಸಿಡಿಲಿನಂಥಾ ಸುದ್ದಿ ಕೇಳಿ ನಡುಗುತ್ತಿದ್ದರೋ... ತಿಳಿಯಲಾರದಂತಹ ವಿಚಿತ್ರ ಪರಿಸರ.
ಹಟ್ಟಿಯ ಜನರೆಲ್ಲಾ ನರಸಿಂಗನ ಗುಡ್ಲ ಹಿಂಭಾಗದ ದೊಡ್ಡಿಯಲ್ಲಿದ್ದ ಹುಣಿಸೇಮರದ ಹತ್ತಿರ ನೆರೆದಿದ್ದರು. ಹಟ್ಟಿಯ ಪಿಳ್ಳೆಗಳು ಸಂದುಗೊಂದುಗಳ ಕೊಚ್ಚೆಯಲ್ಲಿ ನುಗ್ಗಿ ಬಂದ ಪೋಲೀಸ್ ಜೀಪಿನ ಹತ್ತಿರ ನೆರೆದಿದ್ದರು. ದಫೇದಾರ ಪೀರಸಾಬ ಇನ್‌ಸ್ಪೆಕ್ಟರ್ ಆಜ್ಞೆಯಂತೆ; ಏನೇನೋ ಗುರುತು ಹಾಕಿಕೊಳ್ಳುತ್ತಿದ್ದ. ಇನ್‌ಸ್ಪೆಕ್ಟರ್ ಪ್ರಶ್ನೆಗಳಿಗೆ ಹಟ್ಟಿಯ ಹಿರಿಯರು ನಿರ್ನಿಮಿತ್ತವಾಗಿ ತಲೆ ಕರೆಯುತ್ತಾ ಯಮಯಾತನೆ ಪಡುತ್ತಿದ್ದರು.
ಇಷ್ಟೆಲ್ಲಾ ನಡೆಯುತ್ತಿದ್ದರೂ ನರಸಿಂಗನಂತೂ ಎಂದೂ ಮಾತಾಡದಂತೆ ಮೌನವಾಗೇ ಉಳಿದುಬಿಟ್ಟಿದ್ದ. ಹುಣಸೇ ಮರ ಹತ್ತಿದ ದಫೇದಾರ ಪೀರಸಾಬ ಹಗ್ಗ ಸಿಡಲಿಸಿದಾಗ, ನರಸಿಂಗನ ತಣ್ಣನೆಯ ದೇಹ ಕೊಂಚ ಕೊಂಚವೇ ಅಲುಗಾಡಿತು; ಅವನ ಜೀವಾತ್ಮ ;ಪರಮಾತ್ಮಗಳ ಮಧ್ಯಸ್ಥನಾದ ಕ್ಷೇತ್ರಜ್ಞನು ಪಿತೃಯಾನದ ಮಾರ್ಗವಾಗಿ, ಬ್ರಹ್ಮಸಾಕ್ಷಾತ್ಕಾರದ ಅಖಂಡ ಶಾಂತಿ ಅರಸುತ್ತಾ; ಸೃಷ್ಟಿ, ಲಯ, ಸ್ಥಿತಿಗಳನ್ನು ದಾಟಿ ತಾರಾ ಮಂಡಲ ಸೇರಿ; ಇನ್‌ಸ್ಪೆಕ್ಟರ್‌ ಹೆಂಡತಿಯ ಮೂಗಿನಲ್ಲಿದ್ದ ವಜ್ರದ ನತ್ತಿನ ಹಾಗೆ ಒಮ್ಮೆ ಫಳಗುಟ್ಟಿತು.
(ರಷ್ಯನ್‌ ಕತೆಗಾರ ನಿಖೋಲಾಯ್ ಗೋಗೋಲ್ ಅವರ 'ದಿನೋಸ್' ಕತೆಯಿಂದ ಸ್ಫೂರ್ತಿ.)














0 Comments:

Post a Comment

<< Home